ಉತ್ತರ ಕನ್ನಡ ಜಿಲ್ಲೆಯ ಸಂಗೀತ ಸಾಧಕರು
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರು
ಸುಗಮ ಸಂಗೀತ ಭಾವ ಗೀತೆ ,ಭಕ್ತಿ ಗೀತೆ ,ದಾಸರ ಪದಗಳು, ವಚನಗಳ ಸಂಗೀತ ಸಂಯೋಜಕರು
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಂಪ್ಲಿಯಲ್ಲಿ 1957 ಜನವರಿ 1ರಂದು ಜನಿಸಿದರು.ಹುಟ್ಟಿನಿಂದ ಯಕ್ಷಗಾನ ಪರಂಪರೆಯ ಹಿನ್ನೆಲೆ ಕಲಾಸಾಧನೆಗೆ ಅವರನ್ನು ಕೈ ಬೀಸಿ ಕರೆದಿತ್ತು.ಅವರು ಆಯ್ಕೆ ಮಾಡಿಕೊಂಡಿದ್ದು ಹಿಂದುಸ್ತಾನಿ ಗಾಯನ ಸಂಗೀತ .
ಖ್ಯಾತ ನಾಮರಾದ ಮಾಧುರ್ಯ ಕಂಠದ ಪಂಡಿತ್ ಗಣಪತಿ ಭಟ್ ಅವರ ಬಳಿ ಸಂಗೀತಾಭ್ಯಾಸ ಪ್ರಾರಂಭಿಸಿ ಹಲವಾರು ವರ್ಷ ಅವರ ಕಲಿತು ಬಹು ಅಕ್ಕರೆಯ ಶಿಷ್ಯ ಎನಿಸಿಕೊಂಡರು.
ಮುಂದಿನ ದಿನಗಳಲ್ಲಿ ಭಾರತದ ಅತ್ಯಂತ ಜನಪ್ರಿಯ ಹಿಂದುಸ್ತಾನಿ ದಿಗ್ಗಜ ಗವಾಯಿ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಅವರಲ್ಲಿ ಕಲಿಕೆ ಪ್ರಾರಂಭವಾಯಿತು.
ಧಾರವಾಡಕ್ಕೆ ಬಂದು ನೆಲೆಸಿ ರಾಜಗುರುಗಳ ಬಳಿ ಹಲವಾರು ವರ್ಷಗಳ ಕಾಲ ಸಂಗೀತ ಅಧ್ಯಯನ , ಕಾರ್ಯಕ್ರಮಗಳಲ್ಲಿ ಅವರೊಡನೆ ದೇಶಾದ್ಯಂತ ಒಡನಾಡಿ ಅತ್ಯಂತ ಪ್ರೀತಿಯ ಶಿಷ್ಯ ರಾಗಿ ಹಾಗೂ ಧಾರವಾಡದ ಸಂಗೀತದಲ್ಲಿ ಹೊಸ ಪ್ರತಿಭಾವಂತ ಕಲಾವಿದರಾಗಿ ಹೊರಹೊಮ್ಮಿದರು.
ಆಕಾಶವಾಣಿ ಧಾರವಾಡದ ನಿಲಯ ಕಲಾವಿದರಾಗಿ ನಿಯುಕ್ತಿಗೊಂಡು ಸಂಗೀತದಲ್ಲಿ ಪೂರ್ತಿ ಸಮಯ ತಮ್ಮನ್ನು ತಾವು ತೊಡಗಿಸಿಕೊಂಡರು.
ಪ್ರತಿದಿನ ತಮ್ಮ ಸಂಗೀತವನ್ನು ಹಲವಾರು ಶಿಷ್ಯರಿಗೆ ನಿರಂತರ ಧಾರೆ ಎರೆಯುವಮೂಲಕ ರಾಜಗುರುಗಳ ಸಂಗೀತ ಪರಂಪರೆಯ ಕಂಪನ್ನು ಮತ್ತಷ್ಟು ಸಮೃದ್ಧಗೊಳಿಸಿದರು.
ಆಕಾಶವಾಣಿಯ “ಬಿ ಹೈ ಗ್ರೇಡ್” ಕಲಾವಿದರಾಗಿ ನಿರಂತರ ಕಾರ್ಯಕ್ರಮ ನೀಡಿದ್ದಾರೆ.
ಕರ್ನಾಟಕ ಗೋವಾ ಮಹಾರಾಷ್ಟ್ರ ಹೀಗೆ ಹಲವಾರು ರಾಜ್ಯಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ
ಕರ್ನಾಟಕದ ಭಕ್ತಿ ಸಂಗೀತ ,ಸುಗಮ ಸಂಗೀತ ಕ್ಷೇತ್ರಕ್ಕೆ ಅವರ ಸಂಗೀತ ಸಂಯೋಜನೆಯ ಮಹತ್ವದ ಕೊಡುಗೆ ಇದೆ.
ವಚನ ,ಭಾವಗೀತೆ ,ದಾಸರಪದ ಗಳ ವಿಶೇಷ ಸಂಗೀತ ಸಂಯೋಜನೆ ಇಂದು ಸುಗಮ ಸಂಗೀತದ ಆಸ್ತಿಯಾಗಿ ಎಲ್ಲರ ಮನೆಮಾತಾಗಿದೆ.
ಸುಗಮ ಸಂಗೀತ ಸಮ್ಮೇಳನದಲ್ಲಿ ಹಲವಾರು ಬಾರಿ ಪಾಲ್ಗೊಂಡು ಮುಖ್ಯ ಪಾತ್ರ ವಹಿಸಿದ್ದಾರೆ.
ಹೆಗಡೆ ಅವರ ಸಂಗೀತ ಸಾಧನೆಗೆ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೈಸೂರಿನ ಗಂಗೂಬಾಯಿ ಹಾನಗಲ್ ಕಲೆ ಮತ್ತು ಪ್ರದರ್ಶನ ಕಲೆಗಳ ವಿಶ್ವ ವಿದ್ಯಾಲಯ ಹೆಗಡೆಯವರ ಸಂಗೀತ ಸಾಧನೆಯನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕರ್ನಾಟಕ ಸರ್ಕಾರ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಹೆಗಡೆಯವರನ್ನು ಸನ್ಮಾನಿಸಿದೆ.
ಶರಣರ ವಚನ ಸಂಗೀತ ಸಂಯೋಜನೆಗೆ ಶರಣರು ಹುಬ್ಬಳ್ಳಿ ,ಧಾರವಾಡ ,ಯಾದಗಿರಿ ,ಗುಲಬರ್ಗಾ ಮುಂತಾದ ಮಠಗಳಲ್ಲಿ ಸನ್ಮಾನಿಸಿ ಅವರ ಸಂಗೀತ ಸಂಯೋಜನೆಯ ಸೇವೆಗೆ ಆಶೀರ್ವದಿಸಿದ್ದಾರೆ.
ಪ್ರಸ್ತುತ ಧಾರವಾಡದಲ್ಲಿ ನೆಲೆಸಿ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಮಾಡುತ್ತಾ ನೆಮ್ಮದಿಯ ಬದುಕಿನ ಸಾರ್ಥಕತೆಯೊಂದಿಗೆ ಸಂತೋಷದಿಂದ ಮನೆಯವರೊಂದಿಗೆ ಶಿಷ್ಯರೊಂದಿಗೆ ನಿವೃತ್ತ ಜೀವನವನ್ನು ಕಳೆಯುತ್ತಿದ್ದಾರೆ.