ಇಂದು ರಣದೀಪ್ ಹೂಡ ರವರು ನಿರ್ಮಿಸಿ, ನಿರ್ದೇಶಿಸಿರುವ ಸಾವರ್ಕರ್ ಚಿತ್ರ ನೋಡಿ ಬಂದೆ.
ಸಾವರ್ಕರ್ ರವರ ಜೀವನ ಚರಿತ್ರೆ ಅಗಾಧವಾದದ್ದು. ಅದನ್ನ ಮೂರು ಘಂಟೆಯಲ್ಲಿ ಚಿತ್ರದ ಮೂಲಕ ಹೇಳುವುದು ಅಸಾಧ್ಯ ಆದರೆ ಮುಕ್ಕಾಲು ಘಂಟೆಯ ಹತ್ತು ಎಪಿಸೋಡಿನ ಎರಡು ಸೀಸನ್ಗಳ ವೆಬ್ ಸಿರೀಸ್ ನಲ್ಲಿ ಹೇಳಬಹುದು. ಆದರೂ ರಣದೀಪ್ ಹೂಡ ರವರು ಮಾಡಿರುವ ಕಾರ್ಯ ಅತ್ಯಂತ ಶ್ಲಾಘನೀಯ. ಸಾವರ್ಕರ್ ರವರ ಜೀವನದ ಅತ್ಯಂತ ಪ್ರಮುಖ ಘಟನೆಗಳೆಲ್ಲವನ್ನೂ ಈ ಮೂರು ಘಂಟೆಯ ಸಿನೆಮಾದಲ್ಲಿ ತಂದಿದ್ದಾರೆ ಎನ್ನುವುದೇ ಒಂದು ಸಾಧನೆ.
ಸಾವರ್ಕರ್ ರವರು ಹುಟ್ಟಿದ್ದು 1883 ರಲ್ಲಿ ಮತ್ತು ಮರಣವನ್ನಪ್ಪಿದ್ದು 1966 ರಲ್ಲಿ ಆಗ ಅವರಿಗೆ 82 ವರ್ಷ. ಈ ಸಮಯ ಭಾರತದ ಸ್ವಾತಂತ್ರ್ಯ ದ ಪೂರ್ವ ಹಾಗೂ ನಂತರದ ಅತ್ಯಂತ ಪ್ರಮುಖವಾದ ಘಟನೆಗಳು ಜರುಗಿದ ಸಮಯ. 1857 ರ ಮಂಗಲ್ ಪಾಂಡೆ ಹಾಗೂ ಇನ್ನಿತರರು ನಡೆಸಿದ ಬಂಡನ್ನು ಬ್ರಿಟೀಷರು ಸಿಪಾಯಿ ದಂಗೆ ಎಂದು ಕರೆದರೆ ನಮ್ಮವರೂ ಅದೇ ಹೆಸರನ್ನು ಮುಂದುವರೆಸಿದ್ದರು. ಇನ್ನು ಸಾವರ್ಕರ್ ರವರು ಚಿಕ್ಕವರಿದ್ದಾಗಿನಿಂದಲೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದರು, ಚತ್ರಪತಿ ಶಿವಾಜಿಯವರ ಜೀವನದಿಂದ ಪ್ರಭಾವಿತರಾಗಿದ್ದರು. ಅವರು 14 ರ ಹರೆಯದಲ್ಲಿ ಇದ್ದಾಗಲೇ (1897) ರಲ್ಲಿ ಚಾಪೇಕರ್ ಸಹೋದರರು ಜೆನರಲ್ ರ್ಯಾಂಡ್ ನನ್ನು ವಧಿಸಿದರು ಮತ್ತು ಸಾವರ್ಕರ್ ಈ ಸಹೋದರರ ಕ್ರಾಂತಿಕಾರಿ ಕೆಲಸದಿಂದ ಇನ್ನೂ ಹೆಚ್ಚು ಪ್ರಭಾವಿತರಾಗಿದ್ದರು. ಇದಾದ ನಂತರ ಅವರು 21ರ ಹರೆಯದಲ್ಲಿ ಅಭಿನವ ಭಾರತ ಎಂಬ ರಹಸ್ಯ ಸಮಾಜವನ್ನು ಸ್ಥಾಪಿಸಿದರು. ಇದೆಲ್ಲದರ ಮಧ್ಯೆ ಚಿಕ್ಕಂದಿನಲ್ಲೇ ಪ್ಲೇಗ್ ಮಾರಿಗೆ ತಂದೆಯನ್ನು, ಒಬ್ಬ ಅಣ್ಣನನ್ನು ಕಳೆದುಕೊಂಡರು ಮತ್ತು ನಂತರ ವಿದ್ಯಾಭ್ಯಾಸ ಮುಂದುವರೆಸುವ ಸಮಯದಲ್ಲಿ ಲೋಕಮಾನ್ಯ ತಿಲಕರ ಕ್ರಾಂತಿಕಾರಿ ಕೆಲಸಗಳಿಂದ ಪ್ರಭಾವಿತರಾಗಿ ಅವರ ಮಾರ್ಗದರ್ಶನದಲ್ಲಿ ಮುಂದುವರೆದು ಪುಣೆಯ ಫ಼ರ್ಗೂಸನ್ ಕಾಲೇಜಿನಲ್ಲಿ ತಮ್ಮ ಕ್ರಾಂತಿಕಾರಿ ಕೆಲಸಗಳನ್ನು ಮುಂದುವರೆಸಿದರು. ಅಲ್ಲಿಯೇ ಓದುತ್ತಿದ್ದ ನಮ್ಮ ಕನ್ನಡದವರೇ ಆದ ಆ.ನ.ಕೃ ರವರ ಪರಿಚಯವೂ ಅವರಿಗೆ ಆಗಿತ್ತು. ನಂತರ ಅಲ್ಲಿಂದ ತಿಲಕರ ಹಾಗೂ ಶ್ಯಾಮ್ ಜೀ ಕೃಷ್ನವರ್ಮ ರವರ ಸಹಾಯದಿಂದ ಬ್ಯಾರಿಸ್ಟರ್ ಡಿಗ್ರೀ ಓದಲು ಲಂಡನ್ ಗೆ ಪ್ರಯಾಣಿಸಿದರು. ಅಲ್ಲಿಯೂ ಅವರು ಸುಮ್ಮನಿರಲಿಲ್ಲ ಅಲ್ಲಿಗೆ ಪ್ರಯಾಣಿಸುವ ಸಂದರ್ಭದಲ್ಲೂ ಹಡಗಿನಲ್ಲಿ ಸಹಪ್ರಯಾಣಿಕ ನಾಗಿದ್ದ ಒಬ್ಬ ಸಿಖ್ ಹುಡುಗನನ್ನು ಪರಿಚಯ ಮಡಿಕೊಂಡು ಲಂಡನ್ ಗೆ ತಲುಪುವ ಹೊತ್ತಿಗೆ ಆತನಲ್ಲಿಯೂ ದೇಶಭಕ್ತಿಯನ್ನು ಬಿತ್ತಿದ್ದರು.
ಲಂಡನ್ ನಲ್ಲಿ ಇದ್ದಾಗ ಸಾವರ್ಕರ್ ರವರು ಗ್ವಿಸೆಪ್ ಮಜಿನಿ ಎಂಬ ಇಟಲಿಯ ಕ್ರಾಂತಿಕಾರಿ ಯಿಂದ ಪ್ರೇರಣೆ ಪಡೆದು ‘ಯಂಗ್ ಇಂಡಿಯ’ ಸಂಸ್ಥೆಯನು ಸ್ಥಾಪಿಸಿ ಕ್ರಾಂತಿಕಾರಿ ಕೆಲಸಗಳನ್ನು ಮುಂದುವರೆಸಿದರು. ಇಲ್ಲಿದ್ದಾಗ ಗಾಂಧಿಯವರ ಪರಿಚಯವೂ ಆಯಿತು. ಅಲ್ಲಿ ಪರಿಚಯವಾದ ಮದನ್ ಲಾಲ್ ಧಿಂಗ್ರ ಬಿಸಿರಕ್ತದ ಯುವಕ ಆತ ಲಾರ್ಡ್ ಕರ್ಜನ್ ನನ್ನು ತುಂಬಿದ ಸಭೆಯಲ್ಲಿ ಗುಂಡಿಟ್ಟು ಕೊಂದ! ಸಾವರ್ಕರ್ ರವರು ‘1857 – ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ದ ಪುಸ್ತಕ ಬರೆದರು ಅದು ಬ್ರಿಟೀಷರನ್ನು ಎಷ್ಟರ ಮಟ್ಟಿಗೆ ಬೆಚ್ಚಿ ಬೀಳಿಸಿತ್ತೆಂದರೆ, ಆ ಪುಸ್ತಕ ಪ್ರಕಟವಾಗುವ ಮುನ್ನವೇ ಅದನ್ನ ಬ್ಯಾನ್ ಮಾಡಲಾಯಿತು. ಆದರೂ ಆ ಪುಸ್ತಕವನ್ನು ಎಲ್ಲಾ ಕಡೆ ತಲುಪಿಸಲಾಯಿತು ಮತ್ತು ಆ ಪುಸ್ತಕವು ಭಗತ್ ಸಿಂಗ್ ಸಹಿತ ನೂರಾರು, ಸಾವಿರಾರು ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಿಯಾಯಿತು. ಅಷ್ಟೇ ಅಲ್ಲ ಫ಼್ರಾನ್ಸ್ ನಲ್ಲಿದ್ದ ಬಿಕಾಜಿ ಕಾಮ ರವರ ಪ್ರೇರಣೆಯಿಂದ ಸಾವರ್ಕರ್ ರವರು ಭಾರತದ ಪ್ರಪ್ರಥಮ ಧ್ವಜವನ್ನು ವಿನ್ಯಾಸ ಮಾಡಿದರು. ಅಲ್ಲಿ ಕೊನೆಗೆ ಫ಼್ರಾನ್ಸ್ ನಿಂದ ಲಂಡನ್ ಗೆ ವಾಪಸ್ ಬಂದಾಗ ಕರ್ಜನ್ ನ ಕೊಲೆ ಹಾಗೂ ಅನೇಕ ಕ್ರಾಂತಿಕಾರಿ ಕೆಲಸಗಳಿಗಾಗಿ ಅರೆಸ್ಟ್ ಆಗಿ ಅಲ್ಲಿಂದ ಭಾರತಕ್ಕೆ ಹಡಗಿನಲ್ಲಿ ಬರುವಾಗ ಫ಼್ರಾನ್ಸ್ ನ ಮಾರ್ಸೆಲಸ್ ನ ಹತ್ತಿರ ಹಡಗಿನಿಂಡ ತಪ್ಪಿಸಿಕೊಂಡು ಸಮುದ್ರ ಈಜಿ ಅಲ್ಲಿನ ದಡ ತಲುಪಿದ ತಕ್ಷಣ ಫ಼್ರಾನ್ಸ್ ನ ದೇಶದ ಪೋಲೀಸ್ ಅವರನ್ನು ಅರೆಸ್ಟ್ ಮಾಡಿದ್ದರೆ ಅವರಿಗೆ ಲಂಡನ್ ಗೆ ಅಥವ ಬ್ರಿಟೀಷರಿಗೆ ಹಸ್ತಾಂತರಿಸುವ ಪ್ರಶ್ನೆಯೇ ಬರುತ್ತಿರಲಿಲ್ಲ ಆದರೆ ಅವರ ಹಣೆಬರಹ ಸರಿ ಇರದ ಕಾರಣ ಅವರನ್ನು ಮತ್ತೆ ಬ್ರಿಟೀಷ್ ಪೋಲೀಸರು ಕಾನೂನು ಬಾಹಿರವಾಗಿ ಫ಼್ರಾನ್ಸ್ ನ ನೆಲದಲ್ಲಿದ್ದ ಸಾವರ್ಕರ್ ರವರನ್ನು ಹಿಡಿದಿಕೊಂಡು ಹೋದರು.
ಇಲ್ಲಿಂದ ಮುಂದಕ್ಕೆ ಬಾಂಬೆಗೆ ಅವರನ್ನು ಕರೆತರ್ಅಲಾಯಿತು. ಸುಮಾರು ಒಂದು ವರ್ಷದ ನಂತರ ಅಂಡಮಾನ್ ನ ಸೆಲ್ಯುಲರ್ ಜೈಲ್ ಗೆ 50 ವರ್ಷಗಳ ಜೀವಾವಧಿ ಶಿಕ್ಷೆ ನೀಡಿ ಕಳಿಸಲಾಯಿತು. ಇಲ್ಲಿ ಸಾವರ್ಕರ್ ರವರು ಅನೇಕ ಯಾತನಾಮಯ ದಿನಗಳನ್ನು ಕಳೆದರು. ಸ್ವಂತ ಅಣ್ಣ ಪಕ್ಕದ ಸೆಲ್ ನಲ್ಲಿಯೇ ಇದ್ದರೂ ಎಷ್ಟೋ ವರ್ಷಗಳಾ ನಂತರ ಅದು ಸಾವರ್ಕರ್ ರವರಿಗೆ ತಿಳಿಯಿತು! ಇಲ್ಲಿಯ ತನಕ ಹಿಂದೂ ಹಾಗೂ ಮುಸ್ಲಿಮ್ ಎಲ್ಲರೂ ಒಂದೇ ಗುರಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿದಿದ್ದ ಸಾವರ್ಕರ್ ರವರಿಗೆ ಅನೇಕ ಕಹಿ ಸತ್ಯಗಳ ದರ್ಶನವಾಯಿತು. ದೇಶವನ್ನು ಒಡೆಯುವ ಹುನ್ನಾರಗಳ ಅರಿವಾಯಿತು. ಅಲ್ಲಿಂದ ಅವರು ತಮ್ಮ ಹಿಂದುತ್ವದ ವಿಚಾರವನ್ನು ಪ್ರತಿಪಾದಿಸಲು ಶುರುಮಾಡಿದರು. ತಮ್ಮನ್ನು ಇರಿಸಿದ್ದ ಪುಟ್ಟ ಕೊಳಕಿನ ಕೋಣೆಯಲ್ಲಿಯೇ ಒಂದು ಮೊಳೆಯಲ್ಲಿ ಗೋಡೆಗಳ ಮೇಲೆ ಕವಿತೆಗಳನ್ನು ಬರೆಯಲು ಶುರುಮಾಡಿದರು. ಮಧ್ಯೆ, ಗಾಂಧಿಯವರು ಪ್ರತಿಪಾದಿಸುತ್ತಿದ್ದ ಅಹಿಂಸೆ ದೇಶಕ್ಕೆ ಮಾರಕ, ಇದರಿಂದ ಸ್ವಾತಂತ್ರ್ಯ ಸಿಗುವುದಿಲ್ಲವೆಂದು ಮನಗಂಡು ಸಾಮ, ದಾನ, ದಂಡ, ಬೇಧ ಗಳನ್ನು ಉಪಯೋಗಿಸಿಯಾದರೂ ಜೈಲ್ ನಿಂದ ಹೊರಗೆ ಬಂದು ತಮ್ಮ ಕೆಲಸಗಳನ್ನು ಮುಂದುವರಿಸಬೇಕೆಂದು ಅರಿತು ಕ್ಷಮಿಸಿ, ನಾನು ಇನ್ನೆಂದೂ ಬ್ರಿಟೀಷರ ವಿರುದ್ದ ಕೆಲಸ ಮಾಡುವುದಿಲ್ಲ ಎಂಬ ಪಿಟಿಷನ್ ಕಳುಹಿಸಲು ಶುರು ಮಾಡಿದರು. ಹೀಗೆ ಸುಮಾರು ಐದಾರು ಪಿಟಿಷನ್ ಗಳನ್ನು ಬರೆದರು ಅದರೂ ಬ್ರಿಟೀಷರಿಗೆ ಇವರ ಸತ್ಯ ತಿಳಿದಿತ್ತು ಹಾಗಾಗಿ ಅವರ ಪಿಟಿಷನ್ ಗಳು ರದ್ದಿ ಸೇರಿತು. ಸುಮಾರು ಹತ್ತು ವರ್ಷಗಳ ನಂತರ ಅಂಡಮಾನ್ ನಿಂದ ಬಿಡುಗಡೆ ಗೊಂಡರೂ ಬಾಂಬೆ ಯ ರತ್ನಗಿರಿ ಜಿಲ್ಲೆಯ ಜೈಲಿನಲ್ಲಿ ಅವರನ್ನು ಇಡಲಾಯಿತು. ಅಲ್ಲಿ ರಾಜಕೀಯ ಖೈದಿಯಾಗಿ ಪರಿಗಣಿಸಿದ ಬ್ರಿಟೀಷ್ ಸರ್ಕಾರ ಅವರ ಶಿಕ್ಷೆಯನ್ನು ಸ್ವಲ್ಪ ಸಡಿಲಿಸಿತು. ಅವರಿಗೆ ಓದಲು ದಿನಪತ್ರಿಕೆ, ಬರೆಯಲು ಪೇಪರ್ ಹಾಗೂ ಪೆನ್ನು ಕೊಡಲಾಯಿತು. ಅಲ್ಲಿಯೂ ಸಾವರ್ಕರ್ ರವರು ಬರಹದ ಮೂಲಕ ಅವರನ್ನು ಭೇಟಿ ಮಾಡಲು ಬರುತ್ತಿದ್ದವರ ಮೂಲಕ ತಮ್ಮ ಕ್ರಾಂತಿಕಾರಿ ಕೆಲಸ ಮುಂದುವರೆಸಿದರು. ನಂತರ ಅಲ್ಲಿಂದ ಬಿಡುಗಡೆಯಾದರೂ ಮತ್ತೆ ಗೃಹಬಂಧನದಲ್ಲಿ ಅವರನ್ನು ಇಡಲಾಯಿತು. ಹೀಗೆ ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳು ಅವರು ಜೈಲಿನಲ್ಲಿಯೇ ಇದ್ದರು.
ಇದಾದ ನಂತರ ಅವರಿಗೆ ಗೃಹಬಂದನದಿಂದ ಬಿಡುಗಡೆಯಾದರೂ ಅವರು ರತ್ನಗಿರಿ ಜಿಲ್ಲೆ ಬಿಟ್ಟು ಹೊರ ಹೋಗುವಂತಿರಲಿಲ್ಲ. ಈ ಸಮಯದಲ್ಲಿ ಅವರು ಸುಭಾಷ್ ಚಂದ್ರ ಬೋಸ್ ಅವರನ್ನು ಭೇಟಿ ಮಾಡಿದರು ಹಾಗೂ ರಾಷ್ ಬಿಹಾರಿ ಬೋಸ್ ರವರನ್ನು ಭೇಟಿ ಯಾಗಿ ಅವರ ಕ್ರಾಂತಿಕಾರಿ ಕೆಲಸ ಮುಂದುವರೆಸಲು ಹುರಿದುಂಬಿಸಿದರು. ಸುಭಾಷ್ ಬಾಬು ರವರು ಸಾವರ್ಕರ್ ರವರನ್ನು ಅತ್ಯಂತ ಗೌರವದಿಂದ ನೋಡುತ್ತಿದ್ದರು. ಭಾರತಕ್ಕೆ ಸ್ವಾತಂತ್ರ ಬರುವ ಸಂದರ್ಭದಲ್ಲಿ ಡಾ|| ಬಿ,ಆರ್. ಅಂಬೇಡ್ಕರ್ ರವರಿಗೂ ಸಹ ಸಾವರ್ಕರ್ ರವರ ವಿಚಾರದಲ್ಲಿ ತಕ್ಕಮಟ್ಟಿಗೆ ಒಮ್ಮತವಿತ್ತು. ಸ್ವಾತಂತ್ರ ಬರುವ ಸಂದರ್ಭದಲ್ಲಿ ಗಾಂಧಿ, ನೆಹರೂ ರವರ ವರ್ತನೆ ಅವರಿಗೆ ಸರಿ ಬರಲಿಲ್ಲ. ಅಷ್ಟು ಹೊತ್ತಿಗಾಗಲೇ ಹಿಂದೂ-ಮುಸ್ಲಿಮ್ ಒಡಕು ದೊಡ್ಡದಾಗಿತ್ತು, ಪಾಕಿಸ್ತಾನದ ಜನನವಾಯಿತು. ಸಾವರ್ಕರ್ ರವರು ರಾಜಕೀಯ ಪ್ರವೇಶಿಸದೇ ಹಿಂದೂ ಮಹಾ ಸಭಾ ಸೇರಿದರು. ಆವರ ಹಿಂದುತ್ವ ಅಷ್ಟು ಹೊತ್ತಿಗಾಗಲೇ ಪ್ರಸಿದ್ಧಿಯಾಗಿತ್ತು. ಅವರ ಪ್ರಕಾರ ಹಿಂದೂ ಎಂದರೆ “ಅಸಿಂಧು ಸಿಂಧು ಪರ್ಯಂತಮ್ ಯಸ್ಯ ಭಾರತ ಭೂಮಿಕ, ಮಾತೃ ಭೂ ಪಿತೃಭೂಸ್ಚೈವ ಸಃ ವೈ ಹಿಂದುರಿತಿಸ್ಮ್ರಿತಾ” ಅಂದರೆ ಸಿಂಧು ನದಿಯಿಂದ ಕನ್ಯಾಕುಮಾರಿಯವರಿಗೆ (ಸಮುದ್ರದವರೆಗೆ) ಯಾರು ಈ ಭೂಮಿಯನ್ನು ಪಿತೃಭೂಮಿ, ಹಾಗೂ ಇಲ್ಲಿನ ಸಂಸ್ಕ್ರುತಿಯನ್ನು ಮಾತೆ ಎಂದು ಪೂಜಿಸುವರೋ ಅವರೆಲ್ಲಾರೂ ಹಿಂದೂ ಎಂದು ಕರೆದರು ಇದರಲ್ಲಿ ಜಾತಿ, ಮತ, ಧರ್ಮಗಳ ಬೇಧಭಾವಗಳಿರಲಿಲ್ಲ. ಈ ಹಿಂದೆಯೂ ಕೂಡ ಜಾತಿಪದ್ಧತಿಯನ್ನು ತೊಲಗಿಸಲು ಜಾತಿ ವಿಷವನ್ನು ತಲೆಯೊಳಗಿರಿಸಿದ್ದ ಕೆಲ ಮೇಲ್ಜಾತಿ ಜನಗಳನ್ನು ಎದುರು ಹಾಕಿಕೊಂದು (ಬ್ರಾಹ್ಮಣರನ್ನೂ ಸೇರಿ) ಎಲ್ಲರಿಗೂ ಮುಕ್ತ ಪ್ರವೇಶವಿರುವ ಪತಿತ ಪಾವನ ಮಂದಿರವನ್ನು ಕಟ್ಟಿಸಿದ್ದರು. ಭಾರತ ಎರಡು ಹೋಳಾಗುವುದನ್ನು ಖಂಡಿಸಿದ್ದರು. ಸ್ವಾತಂತ್ರ್ಯದ ನಂತರ ಗಾಂಧಿಯವರ ಹತ್ಯೆಯಾಯಿತು ಅದರಲ್ಲಿಯೂ ಕೈವಾಡವಿದೆಯೆಂದು ಅವರನ್ನು ಜೈಲಿಗೆ ಅಟ್ಟಿದರು ಆದರೆ ಆ ಕೇಸಿನಲ್ಲಿ ಇವರನ್ನು ಸಿಕ್ಕಿ ಹಾಕಿಸುವುದಕ್ಕೆ ಆಗಿನ ನೆಹರೂ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಅಲ್ಲಿಂದ ಮುಂದಕ್ಕೆ ದೇಶದ ಅನೇಕ ಪ್ರಾಂತ್ಯಗಳಲ್ಲಿ ಸಂಚರಿಸಿ ಭಾಷಣಗಳನ್ನು ಮಾಡುತ್ತಾ ಯುವಕರನ್ನು ಹುರಿದುಂಬಿಸುತ್ತಾ ಸಾಗಿದರು. ಅನೇಕ ಪುಸ್ತಕಗಳನ್ನು ಬರೆದರು. ಕೊನೆಗೆ 1966 ರಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ನೀರು, ಆಹಾರ ತ್ಯಾಗ ಮಾಡಿ ಜೀವ ತ್ಯಾಗ ಮಾಡಿದರು.
ವಿಪರ್ಯಾಸವೆಂದರೆ ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿ ಗುಂಡೇಟಿಗೆ ಬಲಿಯಾದರು, ಸಶಸ್ತ್ರ ಕ್ರಾಂತಿಯನ್ನು ಪ್ರತಿಪಾದಿಸಿದ ಸಾವರ್ಕರ್ ರವರು ಅಹಿಂಸೆಯ ಮಾರ್ಗವಾದ ಉಪವಾಸ ಮಾಡಿ ಮಡಿದರು.
ಇಷ್ಟನ್ನೂ ಮೂರು ಘಂಟೆಯಲ್ಲಿ ತೋರಿಸುವುದು ನಿಜಕ್ಕೂ ಘನಂದಾರಿ ಕೆಲಸವೇ. ಈ ಕೆಲಸಕ್ಕೆ ತನ್ನ ತನು, ಮನ, ಧನವನ್ನು ಅರ್ಪಿಸಿ ಎರಡು ವರ್ಷಕ್ಕೂ ಹೆಚ್ಚು ಸಮಯ ವ್ಯಯಿಸಿ, ಸಾವ್ಅರ್ಕರ್ ರವರ ಬಗ್ಗೆ ಓದಿ. ಅರ್ಥ ಮಾಡಿಕೊಂಡು, ರೀಸರ್ಚ್ ಮಾಡಿ, ತನ್ನ ಮನೆಯನ್ನೂ ಮಾರಿ ಹಣ ಸುರಿದು ಸಿನೆಮಾ ಮಾಡಿರುವುದು ಅತ್ಯಂತ ಶ್ಲಾಘನೀಯ ಕೆಲಸ.
ಈ ಚಿತ್ರವೂ ಸುಂದರವಾಗಿ, ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಚಿತ್ರವು ಯಾವುದೇ ಮಾಸ್ ಆಡಿಯೆನ್ಸ್ ಗಾಗಿ ಮಾಡಿರುವ ಸಿನೆಮಾ ಅಲ್ಲ. ಹಾಗಾಗಿ ಇದರ ಸಂಪಾದನೆ ಮೊದಲ ಮೂರು ದಿವಸಗಳಲ್ಲಿ 8.25 ಕೋಟಿಯಷ್ಟಾಗಿದೆ. ಇದನ್ನು ಸುಮಾರು 20 ಕೋಟಿಯಷ್ಟು ಹಣದಲ್ಲಿ ಮಾಡಲಾಗಿದೆ. ಸಾವರ್ಕರ್ ರವರನ್ನು ಅರಿಯದೇ, ಅವರನ್ನು ಓದದೇ ಅವರನ್ನು ಆಡಿಕೊಳ್ಳುವ ಸಂತತಿಗಳು ಈ ದೇಶದಲ್ಲಿ ಡಜ಼ನ್ ಗೆ ಇಪ್ಪತ್ತರಂತೆ ಸಿಗುತ್ತವೆ. ಅವೆಲ್ಲವೂ ಈ ಸಿನೆಮಾ ಫ಼್ಲಾಪ್ ಎಂದು ಕೇಕೆ ಹಾಕಿ ನಗುತ್ತಿವೆ. ಆದರೆ ದೇಶವನ್ನು ಪ್ರೀತಿಸುವ, ಸಾವರ್ಕರ್ ರವರನ್ನು ಆರಾಧಿಸುವ, ದೇಶ ಮೊದಲು ಎಂದು ಜೀವಿಸುತ್ತಿರುವ ಜೀವಗಳು ಇದಕ್ಕೆ ತಕ್ಕ ಉತ್ತರ ಕೊಡಬೇಕಿದೆ. ಕೊಡುತ್ತವೆ ಎಂದು ನಂಬಿದ್ದೇನೆ.
ಈ ಚಿತ್ರವನ್ನು ಬರುವ ವೀಕೆಂಡ್ ತನಕ ಕಾಯದೇ ಇಂದೇ ಹೋಗಿ ನೋಡಿ. ನಿಮ್ಮ ಮನೆಯವರೆಲ್ಲರನ್ನೂ ಕರೆದುಕೊಂಡು ಹೋಗಿ ನೋಡಿ. ನಿಮಗೆ ಸಾವರ್ಕರ್ ಬಗ್ಗೆ ಏನೂ ಗೊತ್ತಿರದಿದ್ದರೂ ಪರವಾಗಿಲ್ಲ ಈ ಚಿತ್ರ ನೋಡಿದರೆ ಎಲ್ಲವೂ ಅರ್ಥವಾಗುತ್ತದೆ.
ವಂದೇ ಮಾತರಂ
~ ರಾಮಪ್ರಸಾದ್ ಬಾಣಾವರ