ಖ್ಯಾತ ಕರ್ನಾಟಿಕ್ ಸಂಗೀತ ಗಾಯಕ ಟಿ. ಎಂ ಕೃಷ್ಣ ಅವರಿಗೆ ಚೆನ್ನೈನ ಮ್ಯೂಸಿಕ್ ಅಕಾಡೆಮಿ ಅವರ ವತಿಯಿಂದ ಸಂಗೀತ ಕಲಾನಿಧಿ ಪ್ರಶಸ್ತಿ ಈ ವರ್ಷಕ್ಕೆ ಸನ್ಮಾನಿಸಲಾಗಿದೆ, ಕೃಷ್ಣರವರಿಗೆ ಈ ಗೌರವ ದೊರಕಿದ ಮರುಕ್ಷಣದಿಂದ ಬಹುತೇಕ ಸಂಗೀತ ದಿಗ್ಗಜರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಖ್ಯಾತ ಗಾಯಕರಾದ ರಂಜಿನಿ ಗಾಯತ್ರಿ, ತ್ರಿಶೂರ್ ಬ್ರದರ್ಸ್, ಹರಿಕಥಾ ಪಂಡಿತ ದುಷ್ಯಂತ್ ಶ್ರೀಧರ್ ಹಾಗೂ ಇನ್ನು ಅನೇಕ ಮಹಾನ್ ಕಲಾವಿದರು ತಮ್ಮ ಅಸಮಾಧಾನವನ್ನು ಈ ವರ್ಷದ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ತಮ್ಮ ತಮ್ಮ ಸಂಗೀತ ಕಚೇರಿಗಳನ್ನು ರದ್ದು ಪಡಿಸುವ ಮೂಲಕ ಅಕಾಡೆಮಿ ವಿರುದ್ಧ ಹೊಸ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಹಿಂದೆಂದೂ ಕಾಣದ, ಕೇಳದ ಪ್ರತಿಭಟನೆ ಈಗ ಯಾಕೆ? ಅನ್ನೋ ಪ್ರಶ್ನೆಗೆ ಉತ್ತರ, ಅಕಾಡೆಮಿ ಅವರ ಈ ವರ್ಷದ ಆಯ್ಕೆ!
ಕೃಷ್ಣರವರು ಉತ್ತಮ ಸಂಗೀತಗಾರರು, ಆದರೆ ಕಲೆಗೆ ಯಾವಾಗ ಜಾತಿ ಹಾಗೂ ಎಡಚರ ವಿಚಾರಣೆಗಳನ್ನು ಅಂಟಿಸಿದರು ಆಗಲೇ ಅವರ ಕಲೆ, ಕಲೆಯಾಗಿ ಉಳೀಲಿಲ್ಲ.
ಶಾಸ್ತ್ರೀಯ ಸಂಗೀತದಲ್ಲಿ ಹೊಸ ಸಂಚಲನವನ್ನು ಮೂಡಿಸೊ ಬರದಲ್ಲಿ ಗುರುಪರಂಪರೆಯ ಸಾಕಷ್ಟು ಸಂಪ್ರದಾಯಗಳನ್ನ ಹಾಗೂ ತಲತಲಾಂತರದಿಂದ ನಡೆದುಕೊಂಡು ಬಂದ ನಮ್ಮ ಆಚಾರ ವಿಚಾರಗಳನ್ನ ಅರ್ಥವಿಲ್ಲದೆ, ಅರ್ಥ ಕೊಡದೆ ಪ್ರಶ್ನಿಸಿ ಕಲಾ ಜಗತ್ತಿಗೆ ಕಾಲು ಇಡುತ್ತಿರುವ ಹೊಸ ಪ್ರತಿಭೆಗಳಿಗೆ ಕಲೆ ಬಿಟ್ಟು ರಾಜಕೀಯದ ಹಾಗೂ ಎಡಚರ ವಿಚಾರಗಳನ್ನು ತಲೆಗೆ ತುಂಬುವ ಪ್ರಯತ್ನದಲ್ಲಿ ಕೃಷ್ಣರವರು ಸಾಕಷ್ಟು ಸಫಲರಾಗಿದ್ದರು.
ಒಂದಷ್ಟು ಸ್ವಲ್ಪ ವರ್ಷಗಳಿಂದ ಕೃಷ್ಣರವರು ಮಿನಿ ಕಾನ್ಸರ್ಟ್ ಗಳನ್ನು ಮನೆ-ಮನೆ ಅಂಗಳದಲ್ಲಿ ಆಯೋಜಿಸಿ, ಸಂಗೀತ ಕಚೇರಿ ಆದ್ಮೇಲೆ ಅದೇ ವೇದಿಕೆಯನ್ನು ತಾವು ಬಲವಾಗಿ ನಂಬಿರುವ ವಿಚಾರಗಳನ್ನು ಹೇರುವ ಸಲುವಾಗಿ ಸಾಕಷ್ಟು ಪ್ರಯತ್ನವನ್ನು ಮಾಡಿರುತ್ತಾರೆ, ವಿಚಾರವನ್ನು ಹೇರುವುದು ತಪ್ಪಲ್ಲ, ಆದರೆ ಕಲೆ ಎಂಬ ಅಸ್ತ್ರವನ್ನು ಉಪಯೋಗಿಸಿ ಅದರ ಮೂಲಕ ಬೆಳೆಯುತ್ತಿರುವ ಕಲಾವಿದರಿಗೆ, ಆತ್ಮಶೋಧನೆ ಎಂಬ ಹೆಸರಿನಲ್ಲಿ ಬುಡವಿಲ್ಲದ ತತ್ವಗಳನ್ನು, ಸಿದ್ಧಾಂತಗಳನ್ನು ತುರುಕುವುದು ಸಂಗೀತ ಜಗತ್ತಿನ ದಿಗ್ಗಜರಿಗೆ ಸಾಕಷ್ಟು ನೋವು ತಂದಿರುವುದು ಸತ್ಯದ ಮಾತು.
ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತದ ಹಲವಾರು ದಿಗ್ಗಜರಾದ ತ್ಯಾಗರಾಜರು ಆಗಲಿ ಅಥವಾ ಕೋಗಿಲೆ ಕಂಠದ ಎಂ ಎಸ್ ಸುಬ್ಬಲಕ್ಷ್ಮಿ ಅವರಾಗಲಿ, ಹೀಗೆ ಅನೇಕರು ಮಾಡಿರೋ ಸಾಧನೆಗಳಿಗೆ ಜಾತಿ ಎಂಬ ಪಟ್ಟವನ್ನು ಕಟ್ಟಿ ಹಿಯಾಳಿಸಿ, ಒಂದು ರೀತಿಯ ದ್ವೇಷದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ ಅನ್ನೋ ಆರೋಪ ಅವರ ಮೇಲೆ ತುಂಬಾ ಪ್ರಬಲವಾಗಿದೆ. ಹೀಗೆ ಒಮ್ಮೆ ಕೃಷ್ಣರವರು ಬ್ರಾಹ್ಮಣರನ್ನು ಸಂಪೂರ್ಣವಾಗಿ ಮುಗಿಸಬೇಕು ಎಂಬ ಕರೆಯನ್ನು ಕೊಟ್ಟಿರುತ್ತಾರೆ ಅಂತ ರಂಜಿನಿ ಗಾಯತ್ರಿ ಅವರು ತಮ್ಮ ಇನ್ಸ್ಟಾಗ್ರಾಂ ನ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ. ಅದಲ್ಲದೆ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಾಕಷ್ಟು ಮಹಿಳಾ ಕಲಾವಿದರು ಹಾಗೂ ಸಾಂಪ್ರದಾಯಿಕ ಕಲಾವಿದರನ್ನು ಹಂತ ಹಂತವಾಗಿ ಟೀಕಿಸಿ ಅವರ ಕಲೆಯನ್ನು ಉದ್ದೇಶವಿಲ್ಲದೆ ಹೀಯಾಳಿಸಿದ್ದಾರೆ.
ಸಂಗೀತ ಕ್ಷೇತ್ರದ ಗೌರವ ಹಾಗೂ ಪರಂಪರೆ ಉಳಿಯುವಿಕೆಗಾಗಿ ಇವತ್ತು ಸಾಕಷ್ಟು ಕಲವಿದರು ತಮ್ಮ ಧ್ವನಿಯನ್ನು ಅಕಾಡೆಮಿ ವಿರುದ್ಧ ಎತ್ತಿ, ಸಭೆಯನ್ನು ಬಹಿಷ್ಕರಿಸಿದ್ದಾರೆ. ತಮಿಳುನಾಡಿನ ಮ್ಯೂಸಿಕ್ ಅಕಾಡೆಮಿಯಲ್ಲಿ ಒಂದಷ್ಟು ವರ್ಷಗಳ ಕಾಲ ಒಂದು ಪ್ರಬಲ ಜಾತಿಯ ವಿರುದ್ಧ ಚಟುವಟಿಕೆಗಳು ನಡೆಯುತ್ತಲೇ ಬಂದಿದೆ ಅನ್ನೋದು ಸಾಕಷ್ಟು ಜನ ಕಲಾವಿದರಿಗೆ ಅರಿವು ಆಗಿರುವ ವಿಷಯ.
ಒಂದು ರೀತಿಯಲ್ಲಿ ಸಂಗೀತ ಪರಂಪರೆಯನ್ನು ನಾಶ ಮಾಡಿ ಹೊಸದೊಂದು ಭಾರತ ಸಾಂಪ್ರದಾಯದ ವಿರುದ್ಧ ಪರ್ಯಾಯ ಸಂಗೀತ ಪರಂಪರೆಯನ್ನು ಸೃಷ್ಟಿ ಮಾಡುವ ಹುನ್ನಾರ ನಡೆದಿದೆ ಅನ್ನೋ ಸತ್ಯ ಸಾಕಷ್ಟು ಕಲಾವಿದರು ಕಣ್ಣೀರು ಇಟ್ಟು ಆತಂಕದಲ್ಲಿ ಭಯದಲ್ಲಿ, ಬಚ್ಚಿಟ್ಟುಕೊಂಡು ಹೇಳಿಕೊಂಡಿದ್ದಾರೆ. ಅವರ ಆತಂಕ ತಮಗೆ ತಮ್ಮ ವೇದಿಕೆ ಎಲ್ಲಿ ಸಿಗದೇ ಹೋಗುತ್ತೋ ಅನ್ನೋದಷ್ಟೇ!
ವೇದಿಕೆ ಇಲ್ಲದ ಕಲವಿದನಿಗೆ ಬದುಕಿದ್ದು ಏನು ಪ್ರಯೋಜನ ಅಲ್ಲವೇ ?
ಆದರೆ ಈ ಬಾರಿ ತಮ್ಮ ತಮ್ಮ ವೇದಿಕೆಗೆ ಮೀರಿ ಸಂಗೀತದ ಪರಂಪರೆ ಮುಖ್ಯ, ನಮ್ಮ ಶಾಸ್ತ್ರೀಯ ಸಂಗೀತವನ್ನು ಈಗ ಉಳಿಸಿಕೊಳ್ಳದಿದ್ದರೆ ಇನ್ನು ಮುಂದೆ ಅದು ಕೈ ತಪ್ಪಿ ಹೋಗುತ್ತದೆ ಅನ್ನೋ ನಿಟ್ಟಿನಲ್ಲಿ ಈ ಒಂದು ಹೊಸ ಆಂದೋಲನ ಅಕಾಡೆಮಿ ವಿರುದ್ಧ, ಟಿ ಎಂ ಕೃಷ್ಣ ಅವರ ವಿರುದ್ಧ ಹಾಗೂ ಎಡಚರ ವಿರುದ್ಧ ಹೊರಹೊಮ್ಮಿದೆ.
ಭಾರತದಲ್ಲಿ ಕಲೆ ಎಲ್ಲರಿಗಿಂತ ಮಿಗಿಲಾದದ್ದು, ಜಾತಿ, ಬಣ್ಣ, ಲಿಂಗ, ವಿಚಾರ ಅಥವಾ ಆಚಾರ ಇವೆಲ್ಲದಕ್ಕಿಂತ ಮೇಲೇರಿ ಬಹಳ ವರ್ಷಗಳಿಂದ ನಮ್ಮ ಸಮಾಜದ ಸಂಸ್ಕೃತಿಯನ್ನು ಸರಿದೂಗಿಸಿಕೊಂಡು ಬರುತ್ತಿದೆ. ಈ ಸಮತೋಲನೆಯಲ್ಲಿ ಅರ್ಥವಿಲ್ಲದ, ಸಾಕ್ಷಿ ಇಲ್ಲದ, ವದಂತಿಗಳಿಗೆ, ಗ್ರಹಿಕೆಗಳಿಗೆ ಅವಕಾಶ ಇಲ್ಲ.
ಸಂಗೀತ ಕ್ಷೇತ್ರದಲ್ಲಿ ಸುನಾಮಿ ಎದ್ದಿದೆ, ಎಲ್ಲಿ ಯಾವಾಗ ಹೇಗೆ ಈ ಸುನಾಮಿ ಮುಟ್ಟುತ್ತೋ ಅದು ಕಲಾರಸಿಕರಿಗೆ ಗೊತ್ತಿರುವ ವಿಷಯ, ಸದ್ಯಕ್ಕೆ ನಮ್ಮ ಪರಂಪರೆ ಉಳಿ ಬೇಕಾಗಿದೆ.
-ಅಭಿಷೇಕ್ ಅಯ್ಯಂಗಾರ್