ಲೋಕಸಭಾ ಚುನಾವಣೆ ಘೋಷಣೆ ಆಗಿದೆ, ಭಾರತೀಯ ಜನತಾ ಪಾರ್ಟಿ 376 ಕ್ಕೂ ಹೆಚ್ಚು ಸೀಟುಗಳನ್ನು ಪಡೆದು ಬಾರಿ ಬಹುಮತ ಸಾಧಿಸಬೇಕು ಅನ್ನೋ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಬಿಜೆಪಿಗೆ 370ಕ್ಕೂ ಹೆಚ್ಚು ಸೀಟುಗಳು ಬರಬೇಕೆಂದರೆ ದಕ್ಷಿಣ ಭಾರತ ಅತಿ ದೊಡ್ಡ ಪಾತ್ರವನ್ನು ವಹಿಸುತ್ತದೆ, ಅದರಲ್ಲೂ ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬಹಳ ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸೀಟ್ಗಳನ್ನು ಗೆದ್ದು ಹೊಸ ದಾಖಲೆಯನ್ನು ರಚಿಸಿತ್ತು.
2023 ವಿಧಾನಸಭಾ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಸೋತ ಬಿಜೆಪಿ ಲೋಕಸಭೆಯಲ್ಲಿ ಮತ್ತೆ ಕರ್ನಾಟಕದಲ್ಲಿ ತನ್ನ ಹಿಡಿತವನ್ನು ಸಾಧಿಸೋಕೆ ಹೊರಟಿದೆ. ಬಹುತೇಕ ತಜ್ಞರು ಹೇಳುವ ಹಾಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅತಿ ದೊಡ್ಡ ನಷ್ಟ ಆಗಿದ್ದು ವರಿಷ್ಠ ನಾಯಕರಾದ ಬಿ.ಎಸ್ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿದ್ದು. ಈ ಸರ್ತಿ ಪಾರ್ಟಿ ಯಾವ ಒಂದು ಹಂತದಲ್ಲೂ ಎಡವ್ದೆ ಬಹಳ ಸೂಕ್ಷ್ಮವಾಗಿ ಕೇಂದ್ರದ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ಆದರೆ ಬಂಡಾಯ ಮಾತ್ರ ಕಡಿಮೆ ಆಗಿಲ್ಲ, ಅದರಲ್ಲೂ ಬೆಂಗಳೂರು ಉತ್ತರ ಹಾಲಿ ಎಂ ಪಿ ಆದ ಹಿರಿಯ ನಾಯಕರು ಆದ ಸದಾನಂದ ಗೌಡರಿಗೆ ಪಾರ್ಟಿ ಟಿಕೆಟ್ ಕೊಡದೆ, ಆ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಗೌಡರು ಪಕ್ಷ ಬಿಡೋ ಸೂಚನೆಯನ್ನು ಕೊಟ್ಟಿದ್ದಾರೆ, ಪಕ್ಷದಲ್ಲಿ ತಮಗೆ ಮೋಸ ಆಗಿದೆ ಅನ್ನೋ ವಾದವನ್ನು ಮಂಡಿಸಿದ್ದಾರೆ; ಆದರೆ ಭಾರತೀಯ ಜನತಾ ಪಾರ್ಟಿಯಲ್ಲಿ ಸದಾನಂದ ಗೌಡರಿಗೆ ನಿಜವಾಗಲೂ ಮೋಸ ಆಗಿದಿಯಾ ? ಅವರಿಗೆ ಅವಕಾಶಗಳು ದೊರಕೆ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೋದರೆ:
ಗೌಡ್ರು ಸರಿ ಸುಮಾರು ಏಳು ವರ್ಷಗಳ ಕಾಲ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದರು ಹಾಗೆ ಸ್ವಲ್ಪ ಹಿಂದಕ್ಕೆ ಹೋದ್ರೆ ಕರ್ನಾಟಕದಲ್ಲಿ ಸುಮಾರು 11 ತಿಂಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು
ಆಮೇಲೆ ನಾಲ್ಕು ವರ್ಷಗಳ ಕಾಲ ಪಕ್ಷದ ಅಧ್ಯಕ್ಷರು ಕೂಡ ಆಗಿದ್ದರು. ಹಾಗ್ ನೋಡಿದ್ರೆ ಗೌಡರು ಪಕ್ಷದಲ್ಲಿ ಎಲ್ಲಾ ರೀತಿಯ ಸ್ಥಾನಮಾನಗಳನ್ನು ಅನುಭವಿಸಿದ್ದಾರೆ.
ನಿಜ ಹೇಳಬೇಕು ಅಂದ್ರೆ, ಬೆಂಗಳೂರು ಉತ್ತರ ಬಹುಶ: ಯಾರಿಗೂ ಬೇಡವಾದ ಅಥವಾ ಕಿವಿಗೆ ಹಾಕಿಕೊಳ್ಳದ ಕ್ಷೇತ್ರವಾಗಿ ಉಳಿದಿದೆ, ಕಳೆದ ಐದು ವರ್ಷಗಳಲ್ಲಿ ಸಂಸತ್ ಸದಸ್ಯರಾದ ಸದಾನಂದ ಗೌಡರು ಒಮ್ಮೆಯಾದರು ಸ್ಥಳೀಯ ಕಾರ್ಯಕ್ರಮಕ್ಕಾಗಲಿ ಅಥವಾ ಸ್ಥಳೀಯ ಕೆಲಸಕ್ಕೆ ಆಗಲಿ ಬಂದದ್ದು ಬಹಳ ಕಡಿಮೆ.
ಬೆಂಗಳೂರು ದಕ್ಷಿಣದಲ್ಲಿ ಹೇಗೆ ತೇಜಸ್ವಿ ಸೂರ್ಯ ರವರು ತಮ್ಮ ಕಚೇರಿ ಮೂಲಕ ಕ್ಷೇತ್ರದ ಜನರಿಗೆ ಸದಾ ಬೆಂಬಲವಾಗಿ ನಿಂತರು
ಹಾಗೆ ಉತ್ತರ ಕ್ಷೇತ್ರದ ಜನರಿಗೆ ಸದಾನಂದ ಗೌಡರ ಎಂ.ಪಿ ಕಚೇರಿ ಎಲ್ಲಿದೆ ಅಂತನು ಗೊತ್ತಿರಲಿಲ್ಲ. ಒಂದು ಕ್ಷೇತ್ರದ ಜೀವಾಳ ಅಂದ್ರೆ ಅದು, ಜನರಿಗೆ ನಾಯಕರು ಯಾವ ಮಟ್ಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾಳೆ ಅನ್ನೋದರ ಮೇಲೆ ನಿಂತಿರುತ್ತದೆ, ಬೆಂಗಳೂರು ಉತ್ತರದ ಪೀಣ್ಯ ಕ್ಷೇತ್ರದಲ್ಲಿ NHAI ರವರ ನೆಲಮಂಗಲದ ಮೇಲ್ ಸೇತುವೆ ದುರ್ಬಲವಾಗಿ ಕಾರ್ಯಾಚರಣೆ ನಿಂತಾಗ, ಸ್ಥಳೀಯ ಸಂಸತ್ ಸದಸ್ಯರು, ಒಮ್ಮೆಯಾದರೂ ಸೇತುವೆಯ ಶೀಘ್ರ ಪುನರ್ ನಿರ್ಮಾಣಕ್ಕೆ ಒತ್ತಾಯ ಮಾಡಿದ್ದು ಕೇಳಲಿಲ್ಲ.
ಟ್ರಾಫಿಕ್ ಬಹಳ ಜೋರಾಗಿ ಆ ಏರಿಯಾದ ಜನರಿಗೆ ತೊಂದರೆ ಉಂಟಾದಾಗಲೂ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ, ಹಸನ್ಮುಖಿ ಎಂದೇ ಪ್ರಸಿದ್ಧರಾದ ಗೌಡರು ತಮ್ಮ ನಗು ಮುಖವನ್ನು ಯಾಕೋ ಉತ್ತರ ಕ್ಷೇತ್ರ ಜನರಿಗೆ ತೋರಿಸಲೇ ಇಲ್ಲ. ಉತ್ತರ ಕ್ಷೇತ್ರದ ಹೆಬ್ಬಾಳ ಕ್ಷೇತ್ರದಲ್ಲಿ ಪಾದಚರರ ಮೇಲ್ ಸೇತುವೆ ನಿರ್ಮಾಣ ಆದಾಗಲೂ, ಅದು ಕುಸಿದು ಬಿದ್ದಾಗಲೂ ಸಂಸತ್ ಸದಸ್ಯರು ಕಾಣಿಸಿಕೊಳ್ಳಲಿಲ್ಲ, ಈಗ ರಾಜಕೀಯ ನಿವೃತ್ತಿ ಘೋಷಿಸಿದ ಮೇಲೆ, ತಮಗೆ ಪಕ್ಷ ಟಿಕೆಟ್ ಕೊಡದೇ ಇದ್ದರೆ ಬಂಡಾಯದ ದಾರಿ ಹಿಡಿತೀನಿ ಅನ್ನೂ ಸ್ಟೇಟ್ಮೆಂಟ್ಗಳನ್ನು ಓದಿದರೆ, ಬೆಂಗಳೂರು ಉತ್ತರದ ಮತದಾರನಾಗಿ ನನಗೇ ನಗು ಬರೋದು ಗ್ಯಾರಂಟಿ. ಪಕ್ಷ ಅವರಿಗೆ ಯಾವ ಸ್ಥಾನಮಾನವು ಕೊಟ್ಟಿಲ್ಲ ಅಂತ ಹೇಳಿದ್ರೆ ಬಹುಶಃ ಅದು ಒಂದು ದೊಡ್ಡ ಸುಳ್ಳು ಅಂತ ಹೇಳಿದರೆ ತಪ್ಪಾಗಲಾರದು.
ಬದಲಾವಣೆಯ ಗಾಳಿ ಬೆಂಗಳೂರು ಉತ್ತರಕ್ಕೆ 2024 ರಲ್ಲಿ ದೊರಕಿದೆ ಆದರೆ ಈ ಗಾಳಿ ಸುಂಟರಗಾಳಿಯ ಅನ್ನೋದೇ ಯಕ್ಷಪ್ರಶ್ನೆ ?
– ಅಭಿಷೇಕ್ ಅಯ್ಯಂಗಾರ್