ರಾಷ್ಟೋತ್ಥಾನ ಸಾಹಿತ್ಯವು ನವೆಂಬರ್ ತಿಂಗಳುಪೂರ್ತಿ ಆಯೋಜಿಸುತ್ತಿರುವ ‘ಕನ್ನಡ ಪುಸ್ತಕ ಹಬ್ಬ’ ಈ ಬಾರಿ ನವೆಂಬರ್ 1ರಿಂದ ಡಿಸೆಂಬರ್ 3ರ ವರೆಗೆ ನಡೆಯಲಿದೆ. 33 ದಿನಗಳ ಕಾಲ ನಡೆಯಲಿರುವ ಈ ಹಬ್ಬದಲ್ಲಿ ಪ್ರತಿದಿನ ಬೆಳಗ್ಗೆ 9.00ರಿಂದ ರಾತ್ರಿ 8.00ರವರೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ವಿವಿಧ ರೀತಿಯ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳೂ ನಡೆಯಲಿವೆ.
1965ರಲ್ಲಿ ಪ್ರಾರಂಭವಾದ ‘ರಾಷ್ಟೋತ್ಥಾನ ಸಾಹಿತ್ಯ’ ಕಳೆದ ಐವತ್ತೆಂಟು ವರ್ಷಗಳಿಂದಲೂ ಕನ್ನಡ ಪುಸ್ತಕ ಪ್ರಕಟನೆಯ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದೆ. ಇತಿಹಾಸ, ರಾಷ್ಟ್ರೀಯತೆ, ವ್ಯಕ್ತಿತ್ವ ವಿಕಾಸ, ಜೀವನಚರಿತ್ರೆ, ವ್ಯಕ್ತಿಚಿತ್ರಗಳು, ಪರಿಸರ, ಅರ್ಥಶಾಸ್ತ್ರ, ಯೋಗ, ಆರೋಗ್ಯ ಹೀಗೆ ಹಲವು ವಿಷಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರಕಾರಗಳಲ್ಲಿ ಇದುವರೆಗೆ 270ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಮಕ್ಕಳಿಗಾಗಿಯೇ ವಿಶೇಷವಾಗಿ ರೂಪಿಸಲಾದ ‘ಭಾರತ-ಭಾರತಿ ಪುಸ್ತಕ ಸಂಪದ’ದ ಮೂಲಕ ಇದುವರೆಗೂ ಕನ್ನಡದಲ್ಲಿ 600 ಪುಸ್ತಕಗಳು ಇಂಗ್ಲಿಷಿನಲ್ಲಿ 225 ಪುಸ್ತಕಗಳು ಪ್ರಕಟವಾಗಿವೆ. ಈ ಪುಸ್ತಕಗಳ ಮೂಲಕ ಮಕ್ಕಳಿಗೆ ಭಾರತದ ಐತಿಹಾಸಿಕ-ಪೌರಾಣಿಕ- ಸಾಹಿತ್ಯಕ-ಸಾಂಸ್ಕೃತಿಕ-ಸಾಮಾಜಿಕ ಮಹಾಪುರುಷರನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಪುಸ್ತಕ ಪ್ರಕಟನೆಗಳ ಜೊತೆಜೊತೆಗೇ ಅನ್ಯಾನ್ಯ ಪ್ರಕಾಶಕರು ಕಾಲಕಾಲಕ್ಕೆ ಪ್ರಕಟಿಸುವ ಸದಭಿರುಚಿಯ ಸಾಹಿತ್ಯಪ್ರಸಾರದಲ್ಲೂ ರಾಷ್ಟೋತ್ಥಾನ ಸಾಹಿತ್ಯವು ತೊಡಗಿಕೊಂಡಿದ್ದು, ಬೆಂಗಳೂರಿನಲ್ಲಿ 3 ಮಾರಾಟ ಮಳಿಗೆಗಳನ್ನು ಹೊಂದಿದೆ. ಉಪನ್ಯಾಸ, ಸಂವಾದ, ಪುಸ್ತಕ ಲೋಕಾರ್ಪಣ ಕಾರ್ಯಕ್ರಮಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿಚಾರಸಂಕಿರಣ – ಹೀಗೆ ಹಲವು ರೀತಿಯ ಚಟುವಟಿಕೆಗಳ ಮೂಲಕ ರಾಜ್ಯದಾದ್ಯಂತ ಕನ್ನಡ ಪುಸ್ತಕಗಳ ಪ್ರಚಾರ-ಪ್ರಸಾರ ಮಾಡುವುದಲ್ಲದೆ, ಸದಭಿರುಚಿಯ ಸಾಹಿತ್ಯ ಓದುಗರನ್ನು ಪ್ರೋತ್ಸಾಹಿಸುವ ಕೆಲಸವನ್ನೂ ರಾಷ್ಟೋತ್ಥಾನ ಸಾಹಿತ್ಯವು ನಿರಂತರವಾಗಿ ನಡೆಸಿಕೊಂಡು ಬಂದಿದೆ.
ಕನ್ನಡ ಪುಸ್ತಕ ಹಬ್ಬದಲ್ಲಿ ರಾಷ್ಟೋತ್ಥಾನ ಸಾಹಿತ್ಯದ ಪ್ರಕಟನೆಗಳಷ್ಟೇ ಅಲ್ಲದೆ, ಕನ್ನಡದ ಪ್ರಮುಖ ಲೇಖಕರ ಕೃತಿಗಳೂ ರಿಯಾಯಿತಿ ದರದಲ್ಲಿ ದೊರೆಯಲಿವೆ. ಕನ್ನಡದ ಬಹುತೇಕ ಎಲ್ಲ ಪ್ರಕಾಶಕರ ಪ್ರಕಟನೆಗಳೂ ಲಭ್ಯವಿರಲಿದ್ದು ಕನಿಷ್ಟ 10% – 50%ರ ವರೆಗೂ ರಿಯಾಯಿತಿ ದೊರೆಯಲಿದೆ. ಪುಸ್ತಕ ಹಬ್ಬಕ್ಕೆ ಭೇಟಿನೀಡುವ ಪ್ರತಿಯೊಬ್ಬರಿಗೂ ಕೂಪನ್ ಭರ್ತಿಮಾಡಿ, ಪ್ರತಿದಿನದ ‘ಲಕ್ಕಿ ಡ್ರಾ’ದಲ್ಲಿ ಭಾಗವಹಿಸಲು ಅವಕಾಶವಿದೆ. ಪ್ರತಿದಿನವೂ ಡ್ರಾ ಮಾಡಿ ವಿಜೇತರಿಗೆ ‘ಪುಸ್ತಕ ಬಹುಮಾನ’ ನೀಡಲಾಗುವುದು.
ಕನ್ನಡ ಪುಸ್ತಕಗಳನ್ನು ಓದುವ, ಓದಿಸುವ ಮಹದುದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಕನ್ನಡ ಪುಸ್ತಕ ಹಬ್ಬಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪುಸ್ತಕಸಂಸ್ಕೃತಿಯನ್ನು ಮುಂದುವರಿಸುವ ಕಾಯಕದಲ್ಲಿ ಕೈಜೋಡಿಸಬೇಕಾಗಿ ಕೋರುತ್ತಿದ್ದೇವೆ. ಬೆಂಗಳೂರಿನ ಶಾಲಾ ಕಾಲೇಜುಗಳವರು ವಿದ್ಯಾರ್ಥಿಗಳೊಂದಿಗೆ ಈ ಪುಸ್ತಕ ಹಬ್ಬಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಪುಸ್ತಕಪ್ರೀತಿ ಮೂಡಿಸಲು ಪ್ರಾರ್ಥಿಸುತ್ತೇವೆ. ತಿಂಗಳುಪೂರ್ತಿ ನಡೆಯಲಿರುವ ವಿಶೇಷ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸಹೃದಯ ಸಾಹಿತ್ಯಾಸಕ್ತರು-ಕಲಾಸಕ್ತರು ಭಾಗವಹಿಸಬೇಕಾಗಿ ಕೋರಿಕೆ.